ಗೌರಿ ಗಣೇಶ ಹಬ್ಬದ ಆಚರಣೆ ಹಿಂದಿನ ಮಹತ್ವ ಏನು? |ಇಲ್ಲಿದೆ ಸಂಕ್ಷಿಪ್ತ ಮಾಹಿತಿ
ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್ ತಿಲಕ್ ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದ್ದರು. ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ.
ಗಣೇಶ ಚತುರ್ಥಿ ಇಂದು ಸಾಂಸ್ಕೃತಿವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವ ಪಡೆದುಕೊಂಡಿದೆ. ಗಣೇಶ ಚೌತಿ ಹಿಂದೂಗಳ ಪವಿತ್ರ ಹಬ್ಬ. ಶ್ರೀ ವರಸಿದ್ದಿ ವಿನಾಯಕ ವ್ರತ ಆಚರಿಸುವ ದಿನ ಭಾದ್ರಪದ ಮಾಸದ ಶುಕ್ಲ ಚತುರ್ಥಿಯು ಶ್ರೀ ಗಣೇಶನ ಜನ್ಮ ದಿನ ಎನ್ನಲಾಗುತ್ತದೆ. ಹೀಗಾಗಿ ಇದು ಧಾರ್ಮಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ.
ಗಣೇಶ ಹಬ್ಬ ಇಷ್ಟೆಲ್ಲಾ ಇತಿಹಾಸ ಮತ್ತು ಮಹತ್ವ ಪಡೆದುಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರಾದ್ಯಂತ ಕೇವಲ ಆಡಂಬರಕ್ಕೆ ಮತ್ತು ಪ್ರತಿಷ್ಟೆಗೆ ಮಾತ್ರ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಇದರಿಂದ ಗಣೇಶ ಹಬ್ಬದ ಮಹತ್ತರ ವಿಷಯಗಳು ಮರೆಯಾಗುತ್ತಿವೆ. ಇಂದಿನ ಯುವಕರಿಗೆ ಗಣೇಶ ಹಬ್ಬವೆಂದರೆ ಕೇವಲ ಮೂರು ದಿನ ಕಾಲ ಕಳೆಯುವ ಸಂದರ್ಭ ಅಷ್ಟೆ. ಬ್ರಿಟೀಷ್ ಆಳ್ವಿಕೆ ವೇಳೆ ಭಾರತೀಯರನ್ನು ಒಗ್ಗೂಡಿಸಲು ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ಗಣೇಶ ಹಬ್ಬ ಆಚರಿಸಲು ಪ್ರಾರಂಭಿಸಿದ್ದರು. ಇಂದಿನ ದಿನ ಗಣೇಶ ಹಬ್ಬದ ನೆಪದಲ್ಲಿ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ಮಾಡುವ ಹಬ್ಬವಾಗಿ ಬದಲಾಗಿದೆ.
ಕಳೆದ ಸುಮಾರು ವರ್ಷಗಳಿಂದ ಪರಿಸರ ಪ್ರೇಮಿಗಳು ಪರಿಸರ ಸ್ನೇಹಿ ಗಣಪತಿಗಳನ್ನು ಪ್ರತಿಷ್ಟಾಪಿಸಲು ವರ್ಷದಿಂದ ವರ್ಷಕ್ಕೆ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಲೆ ಇದ್ದಾರೆ. ಆದರೆ ಪಿಒಪಿ ಗಣೇಶಗಳು ಈ ವರ್ಷವೂ ಕಡಿಮೆಯಾಗುವ ಸಾಧ್ಯತೆಗಳು ಇಲ್ಲ.
ಲೋಕಮಾನ್ಯ ತಿಲಕರು ಸಾರ್ವಜನಿಕ ಉತ್ಸವನ್ನಾಗಿ ಆಚರಿಸಲು ಕರೆ ನೀಡಿದ ಬಳಿಕ ಭಾರತದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನ ಗೌರಿ ಗಣೇಶ ಹಬ್ಬ ಅಥವಾ ಗೌರಿಹಬ್ಬವನ್ನು ದಕ್ಷಿಣ ಭಾರತದಲ್ಲಿ ಮಾತ್ರ ವಿಶೇಷವಾಗಿ ಆಚರಿಸಲಾಗುತ್ತದೆ. ಈ ಹಬ್ಬ ವಿವಾಹಿತ ಸ್ತ್ರೀಯರಿಗೆ ಮೀಸಲಾಗಿದ್ದು ಸಾಮಾನ್ಯವಾಗಿ ಹಿಂದೂ
ಕ್ಯಾಲೆಂಡರ ಪ್ರಕಾರ ಭಾದ್ರಪದ ಶುದ್ಧ ತೃತೀಯ ದಿನದಂದು (ಅಂದರೆ ಭಾದ್ರಪದ ಮಾಸದ ಮೊದಲ ಪಕ್ಷದ ಮೂರನೆಯ ದಿನ) ಆಚರಿಸಲಾಗುತ್ತದೆ. ಗೌರಿ ಹಬ್ಬದ ಮರುದಿನ, ಅಂದರೆ ಭಾದ್ರಪದ ಶುದ್ಧ ಚತುರ್ಥಿ (ಅಂದರೆ ಭಾದ್ರಪದ ಮಾಸದ ಮೊದಲ ಪಕ್ಷದ ನಾಲ್ಕನೆಯ ದಿನ) ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಗೌರಿಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುವ ಹಬ್ಬವಾಗಿದ್ದು ಈ ದಿನದಂದು ತಮ್ಮ ಪತಿಯರಿಗೆ ಹೆಚ್ಚಿನ ಆಯಸ್ಸು, ಸಂತಾನಭಾಗ್ಯ ಮತ್ತು ಕುಟುಂಬಕ್ಕೆ ಸಮೃದ್ಧಿಯನ್ನು ಬೇಡಿಕೊಳ್ಳುತ್ತಾರೆ. ಈ ಹಬ್ಬದ ಆಚರಣೆ ಮತ್ತು ವಿಧಿವಿಧಾನಗಳು ಹೆಚ್ಚೂ ಕಡಿಮೆ ವರಮಹಾಲಕ್ಷಿಯ ಹಬ್ಬದಂತೆಯೇ ಇದೆ. ಒಂದೇ ವ್ಯತ್ಯಾಸವೆಂದರೆ ಅಲ್ಲಿ ಗೌರಿಯ ಬದಲಿಗೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ದಕ್ಷಿಣ ಭಾರತದಾದ್ಯಂತ ವಿವಾಹಿತ ಮಹಿಳೆಯರು ಗೌರಿ ಹಬ್ಬವನ್ನು ತಪ್ಪದೇ, ಅತ್ಯಂತ ಸಡಗರ ಮತ್ತು ಸಂಭ್ರಮಗಳಿಂದ ಆಚರಿಸುತ್ತಾರೆ.
Comments